ಶನಿವಾರ, ಡಿಸೆಂಬರ್ 9, 2017

ಕರುಣಿಸು ಓ ವೆಂಕಟ

ಭುವಿಯಲಿ ಹುಟ್ಟಬೇಕಂತೆ, ಎದೆ ಹಾಲು ಕುಡಿಯಬೇಕಂತೆ
ಅಮ್ಮನ ಮಡಿಲಲಿ ಮಲಗಬೇಕಂತೆ ಎಲ್ಲರು ಮುದ್ದಾಡಿಸುವರಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ವಿದ್ಯೆ ಕಲಿಯಬೇಕಂತೆ ಆಚಾರ ತಿಳಿಯಬೇಕಂತೆ ಸಂಸ್ಕಾರ ಇರಬೇಕಂತೆ
ಹರೆಯ ಬರುವುದಂತೆ ಅರಸಿ ಅರಸುವರಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ಮದುವೆ ಮಾಡಿಸುವರಂತೆ ಮಕ್ಕಳ ತಂದೆಯಾಗಬೇಕಂತೆ
ದುಡಿದು ಗಳಿಸಬೇಕಂತೆ ಪರಿವಾರ ಸಾಕಬೇಕಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ಭವ ಬಂಧನದ ಯಾತ್ರೆ ಮುಗಿಸಿ ಹೋಗಬೇಕಂತೆ ವಾನಪ್ರಸ್ಥಕ್ಕೆ
ಅದಕ್ಕೇಕಿಷ್ಟು ರಾಮಾಯಣ ಇಗೋ ಇಲ್ಲೇ ಭವ ಬಂಧನ ಕಳಚಿಟ್ಟೆ
ಇರದು ತಕರಾರು ಮೊದಲಡಗಿಸು ನನ್ನಸ್ತಿತ್ವ ಮತ್ತೆ ಹೇರು ಹೆಗಲಿಗೆ ನಿನ್ನಭಿಲಾಷೆಯ ನೊಗ
ಓ ವೆಂಕಟ ಪರಿಹರಿಸು ಸಂಕಟ















ಜುಮ್ಮಾಯಿತು

ಕಳೆದ್ಹೋಗಿದೆ ವಿಳಾಸ ನಾನ್ಯಾರೆಂದು ಮರೆತು ಹೋಗಿದೆ
ನೋಟದಲಿ ಮೊದಲಸಲ ಕಲೆತಾಗ ನೋಟ... ಜುಮ್ಮಾಯಿತು

ನನ್ನಭಿಮಾನವನು ಮಣ್ಣು ಮಾಡಿ ಸಾಲದೆ ಪರಿಚಯವನು ಕದ್ದು ಹೋದೆ
ಎಲ್ಲಾ ಕಳೆದರೂ ಸುಖವಿದೆ ನಿನ್ನ ನೆನಪೊಂದೆ ಉಳಿದು.... ಜುಮ್ಮಾಯಿತು














ಅಂದು ಬೆಳದಿಂಗಳ ರಾತ್ರಿ ಆ ಮಲ್ಲಿಗೆ ತೋಟದಲಿ ಘನಮಾನವನು ದೋಚಿದೆ
ಅಲ್ಲಿ ಬಳಕುತ ಬಂದು ಚಂದ್ರನ ಬೆಳಕನು ಹೊದ್ದು ಆಡಿದೆ ಮಾಯದ ಆಟ ... ಜುಮ್ಮಾಯಿತು

ಮದ್ಯದಲಿ ನಶೆಯಿಲ್ಲ  ನಿದ್ದೆಯ ಸುಳಿವಿಲ್ಲ ನೀಗದ ಬೇಗುದಿ ಸಂಭೋಗಕೆ
ಬಾ ನಲ್ಲೆ ಬಂದು ಇನ್ನೊಮ್ಮೆ ದೋಚು ಎಲ್ಲವನು..ಹಾ ಈ ಯಾತನಾಮೋಹ ... ಜುಮ್ಮಾಯಿತು

ಲೋಕದ ವೃಥಾಚಿಂತೆ ಕಾಣದಾಯಿತು ಅವನ್ಯಾರೋ ಇವನ್ಯಾರೋ ಈಗಿನ್ನೇಕೆ?
ಪರದೆ ಹರಿದಾಗ ನನಗೂ ನಿನಗೂ ಉಳಿದುದೊಂದೇ ಪರಿಚಯ... ಜುಮ್ಮಾಯಿತೋ... ಜುಮ್ಮಾಯಿತು. 

The Morning Star of the Southwest, St. Philomena...

https://youtu.be/gg2qqrKwY7c?si=egtxAbeECGXwtONM