ಶನಿವಾರ, ಡಿಸೆಂಬರ್ 16, 2023

Whispers of Stolen Identities

In the dance of glances, a meeting divine,
A thrill coursing through like sweet-aged wine.

Dignity lost, identity taken away,
Yet joy persists in the memory's sway.

Moonlit theft in a jasmine embrace,
Magic woven in the moonlight's grace.

No intoxication, no need for haste,
Come, darling, and let everything be erased.

Worldly worries vanish, names unspoken,
In the torn curtain, hearts are awoken.

Me and you, and you and me,
In the thrilling dance of destiny.


ಹೊಸತು

ಶನಿವಾರ, ನವೆಂಬರ್ 25, 2023

ಸೀತಾನದಿ

ಪಡುವಣದ ಶಿಖರ ಶೃಂಖಲೆಯೊಳು
ಆಗಂಬೆಯ ಮೇರು ತಾಣವದು
ನರಹರಿ ಮಡಿಲಿನ ಶಿಶುವೊಂದು
ಅಂಕುಡೊಂಕಿನ ದೂರ ಸವೆ‌ಸಿ ಬೆಳೆದಳು
ಅವಳೇ ನಲ್ಮೆಯ ಸೀತಾ...

ಧುಂಮ್ಮೆಂದು ಧುಮುಕಿ ಕಲ್ಲು ಬಂಡೆಗಳ ಚಚ್ಚಿ
ಮೈಯ್ದಡವಿಯೆದ್ದು ನುಸುಳುತ ಸಾಗಿದಳು
ಬಲಿತು ನೆರೆದವಳು ಪುನಃ ಸಣಕಲಾದಳು ಕಳೆಗುಂದಿ
ಕೂಡ್ಲು ಜೋಂಮ್ಳು ಬರ್‍ಕಾನಗಳಾರ್ಭಟವನು ತೊರೆಗಳ 
ಜುಳುವಲಡಗಿಸಿದಳು
ಅವಳೇ ಒಲವಿನ ಸೀತಾ...
 
ಧಿಂಮ್ಮೆಂದು ಮತ್ತೆ ಪುಟಿದಳು ಹೊನಲಾಗಿ ಹರಿದಳು
ಹಸಿರ ತೋರಣ ಹಾಸಿದವಳು ಹೂಮಾಲೆ ಕಟ್ಟಿದಳು
ತನ್ನ ಒಡಲಲಿ ಪ್ರೀತಿ ಬಿತ್ತಿ ಉಸಿರುಗಳನು ಹಡೆದಳು
ಮರ್ಮವನರಿತವಳು ಕರ್ಮ ಕಳೆದು ಗಮ್ಯದಲ್ಲಿ ನಡೆದಳು
ಅವಳೇ ವಿಸ್ಮಯ ಸೀತಾ...

ಸೋಮೇಶ್ವರನ ಜಡೆಯಜಾರಿ ಕೃಷ್ಣನಾಡಿಗಿಳಿದು 
ಹೆಬ್ರಿಯಲೋಲಾಡಿ ನೀಲಾವರದಲಿ ನಲಿದಾಡಿ
ನೂರಾರು ಮೈಲುದ್ದ ಬೆಳೆಪೈರನು ರಮಿಸಿದವಳು
ಅರಬ್ಬಿಯ ವಶವಾದಳೆ ಬೆಂಗ್ರೆಸುವರ್ಣಸಂಗಮದ ಕೋಡಿ
ಅವಳೇ ಸಾಹಸಿ ಸೀತಾ...

ಮುಂಗಾರಿನಲಿ ತುಂಬಿ ಚೆಲ್ಲಿದವಳೇ 
ಆತಂಕ ತರುವವಳೇ, ಆದರೇನಂತೆ
ನನ್ನ ಸೀತಾ...ಅವಳೇ ನಲ್ಮೆಯ ಸೀತಾ...
ನನ್ನ ಸೀತಾ...ಅವಳೇ ಒಲವಿನ ಸೀತಾ...
ನನ್ನ ಸೀತಾ...ಅವಳೇ ವಿಸ್ಮಯ ಸೀತಾ...
ನನ್ನ ಸೀತಾ...ಅವಳೇ ಸಾಹಸಿ ಸೀತಾ...



ಹೊಸತು

ಗುರುವಾರ, ಮೇ 7, 2020

ಕರೋನ

ಹಮ್ಮು ಬಿಮ್ಮಿನ ಕನ್ನಡಿಯ ಪ್ರತಿಬಿಂಬ ಮಾನವ ಬದುಕು
ರಾಗ ದ್ವೇಷ ಬಯಕೆಗಳಲಿ‌ ಬೆಂದ ಸಂಕಟಗಳ ಗೊಜಲು
ಒಡೆದ ಹಾಲು ಹುಳಿಹಿಟ್ಟಂತೆ ಅಪ್ರಯೋಜಕ ತಿರುಳು
ಸ್ವಾರ್ಥ ಪ್ರೀತಿಯ ತೋರ್ಪಡಿಕೆಯ ಬಣ್ಣಗಳು
ಹಲವು ಬಿನ್ನಾಣಗಳ ಸಂಕೋಲೆ ಸರಮಾಲೆಗಳು




ಕೊನೆಯಿಲ್ಲದ ಕನಸುಗಳ ಬೆನ್ನೇರಿ ಓಡಿ ಓಡಿ ಸುಸ್ತಾಗಿತ್ತು
ರಣಕಲಿಯಂತೆ ವೈರಾಣು ಕರೋನ ದಾರಿಗಡ್ಡ ನಿಂತಿತ್ತು
ಆಸೆಗಳ ಗೋಪುರವನು ಕ್ಷಣಾರ್ಧದಲಿ ಕೆಡವಿತು
ನೋಡನೋಡುತ್ತಲೆ ಜೀವಕಳೆ ತೇಲಿಹೋಯ್ತು
ಪ್ರಾಪಂಚಿಕ ನಗ್ನಸತ್ಯ ಮತ್ತೊಮ್ಮೆ ಬೆತ್ತಲೆಯಾಯ್ತು

ದಾಂಗುಡಿ ಇಡುವ ಧಾವಂತದ ಬದುಕು
ಈಡೇರದ ಬಯಕೆಗಳ ಅನಂತತೆಯಲಿ ಸೆರೆಯಾಯಿತು
ಕಾಲಚಕ್ರದಡಿಯಲಿ ಸಿಲುಕಿ‌ ಹೆಣವಾಯಿತು
ವಿಶ್ಲೇಷಣೆಯ ಸಮಯ ಹುಲುಮಾನವಗೆ ಸ್ವಂತ ಅಸ್ಮಿತೆಯ ಕುರಿತು
ಬಂಧನ ಮೀರಿದ ಅದಮ್ಯ ಚೈತನ್ಯ ನಿರ್ಮಲ ಪ್ರೀತಿಯಲಡಗಿತ್ತು


ಶನಿವಾರ, ಡಿಸೆಂಬರ್ 9, 2017

ಕರುಣಿಸು ಓ ವೆಂಕಟ

ಭುವಿಯಲಿ ಹುಟ್ಟಬೇಕಂತೆ, ಎದೆ ಹಾಲು ಕುಡಿಯಬೇಕಂತೆ
ಅಮ್ಮನ ಮಡಿಲಲಿ ಮಲಗಬೇಕಂತೆ ಎಲ್ಲರು ಮುದ್ದಾಡಿಸುವರಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ವಿದ್ಯೆ ಕಲಿಯಬೇಕಂತೆ ಆಚಾರ ತಿಳಿಯಬೇಕಂತೆ ಸಂಸ್ಕಾರ ಇರಬೇಕಂತೆ
ಹರೆಯ ಬರುವುದಂತೆ ಅರಸಿ ಅರಸುವರಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ಮದುವೆ ಮಾಡಿಸುವರಂತೆ ಮಕ್ಕಳ ತಂದೆಯಾಗಬೇಕಂತೆ
ದುಡಿದು ಗಳಿಸಬೇಕಂತೆ ಪರಿವಾರ ಸಾಕಬೇಕಂತೆ
ಬೇಡಲೋ ಬೇಡ ಈ ಸಂಕಟ ಕರುಣಿಸು ಓ ವೆಂಕಟ

ಭವ ಬಂಧನದ ಯಾತ್ರೆ ಮುಗಿಸಿ ಹೋಗಬೇಕಂತೆ ವಾನಪ್ರಸ್ಥಕ್ಕೆ
ಅದಕ್ಕೇಕಿಷ್ಟು ರಾಮಾಯಣ ಇಗೋ ಇಲ್ಲೇ ಭವ ಬಂಧನ ಕಳಚಿಟ್ಟೆ
ಇರದು ತಕರಾರು ಮೊದಲಡಗಿಸು ನನ್ನಸ್ತಿತ್ವ ಮತ್ತೆ ಹೇರು ಹೆಗಲಿಗೆ ನಿನ್ನಭಿಲಾಷೆಯ ನೊಗ
ಓ ವೆಂಕಟ ಪರಿಹರಿಸು ಸಂಕಟ















ಜುಮ್ಮಾಯಿತು

ಕಳೆದ್ಹೋಗಿದೆ ವಿಳಾಸ ನಾನ್ಯಾರೆಂದು ಮರೆತು ಹೋಗಿದೆ
ನೋಟದಲಿ ಮೊದಲಸಲ ಕಲೆತಾಗ ನೋಟ... ಜುಮ್ಮಾಯಿತು

ನನ್ನಭಿಮಾನವನು ಮಣ್ಣು ಮಾಡಿ ಸಾಲದೆ ಪರಿಚಯವನು ಕದ್ದು ಹೋದೆ
ಎಲ್ಲಾ ಕಳೆದರೂ ಸುಖವಿದೆ ನಿನ್ನ ನೆನಪೊಂದೆ ಉಳಿದು.... ಜುಮ್ಮಾಯಿತು














ಅಂದು ಬೆಳದಿಂಗಳ ರಾತ್ರಿ ಆ ಮಲ್ಲಿಗೆ ತೋಟದಲಿ ಘನಮಾನವನು ದೋಚಿದೆ
ಅಲ್ಲಿ ಬಳಕುತ ಬಂದು ಚಂದ್ರನ ಬೆಳಕನು ಹೊದ್ದು ಆಡಿದೆ ಮಾಯದ ಆಟ ... ಜುಮ್ಮಾಯಿತು

ಮದ್ಯದಲಿ ನಶೆಯಿಲ್ಲ  ನಿದ್ದೆಯ ಸುಳಿವಿಲ್ಲ ನೀಗದ ಬೇಗುದಿ ಸಂಭೋಗಕೆ
ಬಾ ನಲ್ಲೆ ಬಂದು ಇನ್ನೊಮ್ಮೆ ದೋಚು ಎಲ್ಲವನು..ಹಾ ಈ ಯಾತನಾಮೋಹ ... ಜುಮ್ಮಾಯಿತು

ಲೋಕದ ವೃಥಾಚಿಂತೆ ಕಾಣದಾಯಿತು ಅವನ್ಯಾರೋ ಇವನ್ಯಾರೋ ಈಗಿನ್ನೇಕೆ?
ಪರದೆ ಹರಿದಾಗ ನನಗೂ ನಿನಗೂ ಉಳಿದುದೊಂದೇ ಪರಿಚಯ... ಜುಮ್ಮಾಯಿತೋ... ಜುಮ್ಮಾಯಿತು. 

ಗುರುವಾರ, ನವೆಂಬರ್ 19, 2015

ನಿರ್ಲಿಪ್ತ ಮೌನ

ಅದೇಕೆ? ನಿರ್ಲಿಪ್ತ ಮೌನವೇಕೆ?
ಈ ಪರಿಯ ಪರೀಕ್ಷೆಯೇಕೆ?
ಹೃದಯ ಬೇಗುದಿಯ ಹೊಯ್ದಿಹೆ ಚರಣಕೆ
ಪರಿಹಾರ ಉಪಚಾರ ಕಾಣದೆ

ಉತ್ತರವಿಲ್ಲ ಸುಳುಹು ಸೂಚನೆಯಿಲ್ಲ
ತತ್ತರಿಸಿದೆ ಅರಿತು ನಾಳೆ ಅಗೋಚರ
ಅಯ್ಯಾ ನಿನ್ನ ಮೌನ, ನಿರ್ಲಿಪ್ತ ಮೌನ
ಮರಣದಷ್ಟು ಘೋರ...

ದಾರಿತೋರು ನಿನ್ನಡಗುದಾಣಕೆ
ತೊಡಗಿರುವೆ ಹುಡುಕಲೀಗೀಗ
ಕತ್ತಲೆಯಲಿ ಚಲಿಸಿ ಯಾಮಾರಿದೆ
ಬೆಳಗಿಸು ಓಜಸ್ವಿ ಕಿರಣಗಳನೀಗ

ಸೋಲುತಿರುವೆನೇನೋ ಹುಡುಕಾಟದಲಿ?
ಇಲ್ಲಾ ಮರುಳನಾದೆನೋ ನಾನಾರೆಂದು
ತಿಳಿಯದೆ ಹೊರಟೆ ನಿನ್ನನರಿಯಲು
ಏನಿದರ ಮರ್ಮ? ಶ್ರುತಪಡಿಸು

ಸರಿಸು ಮಾಯದಾ ತೋರಣವ
ತೆರೆಸು ಕಣ್ಣ ಕಾಣುಲು ನನ್ನನು
ನಿನ್ನಲಿ ಕರಗಿ ನಾನೀನಾಗಿ
ಚಿರಂತರ ಚಿನ್ಮಯ ಅಲೆಯಾಗಲು



ಬುಧವಾರ, ಜೂನ್ 5, 2013

ಶಂಕೆ ಬೇಡ



ನನ್ನೊಲವು ನಿನ್ನೊಳಿರಲು
ನಿನ್ನ ಧ್ಯಾನವೇ ಕಾಯಕ
ತಿರುಕನಂತೆ ತಿರುಗದು
ಮನ ಸ್ಥಿರ ನಿತ್ಯನಿರುತ

ಶಂಕೆ ಏಕೆ ನನ್ನಲಿ?
ಪ್ರೇಮ ರೇಖೆ ಎಳೆದಿದೆ
ಅಂಕೆ ಮೀರಿ ಹೋಗಲಾರೆ
ಸೆಳೆಯದನ್ಯ ಆಕರ್ಷಣೆ

ಪ್ರೀತಿ ಬೆಳೆದು ಬಲಿತು
ಸಾಂಗತ್ಯ ಫಲಿಸಿದೆ
ತನುಮನ ಬೆಳಗಿದೆ
ನಿನ್ನ ಬೆಳಕಿನಿಂದಲೆ

ಕೊರತೆ ಏನೂ ಇರದು
ಪೂರ್ಣ ಪೂರ್ಣ ಬದುಕು
ನಂಬಿಕೆಯ ನೆಚ್ಚಿರಲು
ಒಲವ ಬಂಧ ಮುರಿಯದು

ಮಂಗಳವಾರ, ನವೆಂಬರ್ 20, 2012

ಆಶಯ


ಉಜ್ವಲ ಭಾರತದ ಭವಿಷತ್ತು ಬೆಳಗಲಿ
ದೇಶಬಾಂಧವರ ಬಾಳು ಫಲವೀಯಲಿ
ಹಸಿವು ನೀಗಿ ದಾಹ ತೀರಲಿ
ರೊಟ್ಟಿ ಬಟ್ಟೆ ಮನೆ ಹೊಂದಲಿ

ನೆಲ-ಜಲ ಬೆಟ್ಟ-ಕಾಡು ರಕ್ಷಣೆಕಾಣಲಿ
ಜೈವಿಕ ಕ್ರಾಂತಿಯಲಿ ಹೊಲಪೈರು ನಳನಳಿಸಲಿ
ಕೈಗಾರಿಕೆ ನೆಲೆಕಂಡು ಉದ್ಯೋಗದೊರಕಲಿ
ಅಭಿವೃದ್ದಿಯಪಥ ಪರಿಸರಪರವಾಗಿರಲಿ

ಪ್ರತಿ ಮಗು ಸಮಾಜಮುಖಿಯಾಗಲಿ
ಸಂಸ್ಕೃತಿ ಸಂಸ್ಕಾರಮೇಳೈಸಿ ಮೌಢ್ಯತೆ ಕರಗಲಿ
ಆಚಾರವಿಚಾರದಲಿ ಸಿರಿವಂತಿಕೆಯಿರಲಿ
ವಿದ್ಯೆವಿದ್ವತ್ತಿರಲಿ, ಜ್ಞಾನಸಾಗರವಾಗಲಿ

ಸಮೃದ್ದಿ ಸಾಮರಸ್ಯ ಜೀವಾಳವಾಗಲಿ
ಸಂಕುಚಿತತೆ ವೈಶಾಲ್ಯದಲಿ ಕಳಚಲಿ
ರಾಷ್ಟ್ರವೈಭವದಿ ಅಭಿಮಾನ ಮೊಳಗಲಿ
ನ್ಯಾಯ ನೀತಿ ಸದ್ದರ್ಮ ಬುನಾದಿಯಗಲಿ

ಶನಿವಾರ, ಮೇ 5, 2012

ಸಹಬಾಳ್ವೆ


ಮಧುರ ಭಾಂದವ್ಯ ನಮ್ಮದು ಮಧುರ ಭಾಂದವ್ಯ  
ಒಂದಾಗಿ ಬಾಳುವ ಕುಟುಂಬದೊಳಗಿದೆ ಸಮರಸದ 
ಮಧುರ ಭಾಂದವ್ಯ ಅತಿ ಮಧುರ ಭಾಂದವ್ಯ
ದೇಶ ಕಟ್ಟುವ ಭಾವೈಕ್ಯದ ಭಾಂದವ್ಯ

ಕಲಹವರಿಯೆವು ಪ್ರೇಮ ಸವಿವೆವು
ಒಡಹುಟ್ಟಿದರೆಲ್ಲರು ಸಹಬಾಳ್ವೆಯಲಿರುವೆವು
ನಮ್ಮ ಮಕ್ಕಳಲಿ ನಮಗಭಿಮಾನವು
ನೀತಿ ನಡೆಯಲವರು ಸದಾಚಾರಿಗಳು

ಹೆತ್ತವರಲಿ ನಮಗಿರಲಾದರವು
ಸೇವೆಮಾಡಿ ಪುಣ್ಯಪಡೆವೆವು
ಅವರ ಹಾರೈಕೆ ಜೊತೆಯಲಿರಲು
ಅಂಜದೆ ಐಕ್ಯ ಪಥದಲಿ ಮುನ್ನಡೆವೆವು

ಕೂಡಿ ಬರುವೆವು ದಿವ್ಯ ಸನ್ನಿಧಿಗೆ
ಹಾಡಿಹೊಗಳಲು ಏಕ-ದೇವ-ಬಹುನಾಮಗಳನು 
ಮುರಿಯದ ಭಾಂದವ್ಯ ಇರಲೆಂದಿಗೂ ಹೀಗೆ
ಪರಾಂಬರಿಸಿ ವಿಭು ದಾರಿತೋರೆಮ್ಮನು

ಶನಿವಾರ, ಏಪ್ರಿಲ್ 21, 2012

ಹೊಂಗೆಹೂವು ಮಾವು ಚಿಗುರು

ಹೊಂಗೆಹೂವು ಮಾವು ಚಿಗುರಿದೆ 
ಚೈತ್ರಯುಗಾದಿಯ ಸಡಗರಾರಂಭಕೆ 
ನಾಜೂಕಿನಲಿ ಪ್ರಕೃತಿಯು ಚೆಲುವನ್ನು ಹರವಿದೆ  
ಲಜ್ಜೆಯ ವಧುವಿನಂತೆ 

ನೋಡಿರಿ ಮನ್ಮಥನ ಗೆಳೆಯನನು
ಹೂಡಿ ನಿಂತಿಹನು ಹೂಬಾಣವನು
ಕಾಮನೆಗಳ ಕೋಡಿ ಹರಿಯಲು
ಕಾಣಿರಿ ಮದನೋತ್ಸವದ ಲವಲವಿಕೆಯನು

ಎಣ್ಣೆಯ ಜಳಕಮಾಡಿ ಹೊಸದಿರಿಸು ಧರಿಸುವರು 
ದೇವ ದೇವಿಯರ ನಮಿಸುವರು 
ಸಂತಸ ಸಿಂಚನ ಸಂಚಾರದಲಿ
ಭಕ್ಷ-ಭೋಜನಗಳ ಹಂಚಿ ಸಂಭ್ರಮಿಸುವರು 

ಹಬ್ಬಹರಿದಿನಗಳ ಆರಂಭವು 
ಜಾತ್ರೆಗಳ ಅನುರಣನವು
ನವ ಯೋಚನೆ ಯೋಜನೆಗಳಿಗೆ ಸಕಾಲವು 
ಆರಂಬಗಾರನಿಗೆ ಗದ್ದೆಗಿಳಿಯುವ ತವಕವು

ಬೇವು-ಬೆಲ್ಲಧ್ಯೋತಕ ಜೀವನ
ಸಾಗರಯಾನದಲಿ ಸಿಹಿಕಹಿಗಳನುಕ್ರಮಣಿಕೆ
ಹೊಸವರುಷದ ರಾಗರಸ ಮಾಮರದಲಿದೆ
ಕೋಗಿಲೆ ಹಾಡಿದೆ ವಂದನೆ ವಸಂತಮಾಸಕೆ


ಸೋಮವಾರ, ಏಪ್ರಿಲ್ 16, 2012

ಬದುಕು-ಗರಿಕೆ

ಬದುಕು ಹುಲ್ಲಂತೆ ಗರಿಕೆ ಹುಲ್ಲಂತೆ
ನೀರ ಒಸರಿನ ಹಿಡಿದು ವಾಸನೆ 
ಬೆಳೆಯಿತು ಕಂಡಲ್ಲಿ ಬಂಡೆಯೆಡೆಯಲ್ಲಿ
ಹೆಂಚ ಮಾಡಲ್ಲಿ, ಸಂದುಗೊಂದಲ್ಲಿ

ಅವಕಾಶವಿರುವಲೆ ಬಿಟ್ಟು ಕೊರಗಬೇಡ
ವಿಶಾಲ ಪ್ರಪಂಚದಲನಂತ ಅವಕಾಶ
ನೆಲೆನಿಲ್ಲು ತಳವೂರು ಸಿಕ್ಕಲ್ಲಿ
ಭರವಸೆಯಿರಲಿ ಚಿರಂಜೀವಿಯಲ್ಲ ನೀನಿಲ್ಲಿ

ಭೀಕರ ಬರದಂತೆ ಬಿಸಿಲ ಝಳಪು
ಪಸೆ ಆವಿಯಂತೆ ಮುಗಿಲೇರಿತು
ಗರಿಕೆ ಬಾಡಿತು ಒಣಗಿ ಕರಟಿತು
ಆಶಿಸಿ ಮಳೆಯ ತಿರುಗಿ ಚಿಗುರಲು

ಕಷ್ಟಕೋಟಲೆಗಳು ಕಾಲನಿಯಮಗಳು
ಸಾಮಂಜಸ್ಯ ಬದುಕಿನ ಮೂಲನಿರ್ಣಯಗಳು
ನಿರಂತರವಲ್ಲ ಇರುಳು ದುಡುಕದಿರು ಸ್ವಲ್ಪತಾಳು
ಅಳಿವುಉಳಿವಿನಂಚಿನಲ್ಲಿ ಕೊಂಚಕಾಯು

ಹಿಂದಿರುವರ ಮುಂಬಲವಾಗು ಮುಂದಡಿಯಿಡಲು
ನೆರವಾಗು, ನಿನಗೂ ಪರರಿಗೂ ಉದಾರಿಯಾಗು
ಸೀಮೆ ಮೀರಿದ ಬಾನಿಗೆ ತೆರದ ಗರಿಕೆ
ಮೇವು ನೀಡಿತು ಜೀವಜಗಕೆ

ಗುರುವಾರ, ನವೆಂಬರ್ 17, 2011

ಕಾಡು ಚಿರತೆ ನಾಡಿಗೆ ಬಂದಿತ್ತಾ


ಕಾಡು ಚಿರತೆ ನಾಡಿಗೆ ಬಂದಿತ್ತಾ
ಕುರಿಕುನ್ನಿಗಂಟಿಯ ನುಂಗಿತ್ತಾ
ಊರ ಸೇರೋ ಕಾಡುದಾರಿ
ನಡುಮದ್ಯ ಹಾದಿಯಲ್ಲಿ
ಶಬ್ದ ಕೇಳದ ನೀರವದಲ್ಲಿ
ನೆತ್ತಿ ಮೇಲೆ ಸೂರ್ಯ ಹತ್ತಿ
ಧರೆಗೆ ನೆರಳ ಜಡೆಯ ಸುತ್ತಿ
ನಿಂತ ವನದ ಗೆಲ್ಲಿನಿಂದ
ಬೇಟೆಗಾಗಿ ಹೊಂಚು ಹಾಕಿತ್ತಾ (ಪಲ್ಲವಿ)
ಬೆಂಕಿಕೆಂಡ ಹೊತ್ತ ಮೈಯ
ಉದ್ದಕ್ಕುದ್ದ ಬಾಗಿದ ಬಾಲ
ಸಣ್ಣ ಕಿವಿನೇರ ಕಣ್ಣ
ಕೋಲ್ಮಿಂಚಲೆ ಹೂಡಿ ಸಂಚ
ನೀಟು ಮೀಸೆ ಗಲ್ಲಸೆಟೆದು
ಚೂಪು ಈಟಿ ದವಡೆ ಮಿರಿದು
ಕೊಕ್ಕೆ ನಖದಿ ಟೊಂಗೆ ಕೆರೆದು
ಕವಣೆ ಕಲ್ಲು ಬಿಟ್ಟ ಹಾಂಗ
ತಪ್ಪದ ಗುರಿ ಹೊಂಚಿನ ಮೇಲೆಗರಿತ್ತಾ (೧)
ಪುಷ್ಟಕಾಲು ಸ್ಪಷ್ಟಓಟ
ದಷ್ಟಬಲಿಷ್ಠ ಖಂಡಮಾಂಸ
ಹೊತ್ತು ಇಳಿದು ಗ್ರಾಮ ತಲುಪಿ
ಹಟ್ಟಿಹೊಕ್ಕು ಪ್ರಾಣ ಕೆಡವಿ
ಬಡ ಬದುಕ ರಕ್ತಹೀರಿ
ಮುದದಿ ಕುಣಿದು ಸೊಕ್ಕೇರಿ
ಹೋಗ್ವೆನೆಂದು ನೆನೆದು ತಿರುಗಿ
ಏರಿಹಾರಿ ದಾರಿ ಮರೆತು
ಕಾಲು ಜಾರಿ ಖಾಲಿ ಬಾವಿಗೆ ಬಿದ್ದಿತ್ತಾ (೨)
ಜಾತ್ರೆ ನೆರೆದ ಬಾವಿಹತ್ರ
ದಿಗಿಲೇರಿದ ಕೂಗಾಟ
ನೂರು ನೇತ್ರ ತಿವಿದ ನೋಟ
ಕೈಯ ಬೆರಳ ಸಂಜ್ಞೆಯಾಟ
ಕಂಡಿತ್ತ ಗಲಿಬಿಲಿಗೊಂಡಿತ್ತ
ಬಲೆ ಇಳಿಸಿ ಮೇಲಕ್ಕೆತ್ತಿ
ಬಂಧಿಮಾಡೋ ಮಂದಿಗ್ಹೆದರಿ
ಬರಿದುಮಾಡಿ ಛಂಗನೆಗೆದು
ಓಟಕ್ಕಿತ್ತ ಕಾಡೊಳು ಮರೆಯಾಗಿತ್ತಾ (೩)

ಶನಿವಾರ, ಅಕ್ಟೋಬರ್ 29, 2011

ಹಣತೆ ನೀನಾಗಿರಲು

ಹಣತೆ ನೀನಾಗಿರಲು
ಅರಳೆ ನಾನಾಗುವೆ
ಉರಿಬೆಂಕಿಯಲುರಿದು
ಲೋಕ ಬೆಳಗುವೆ

ಮರವು ನೀನಾಗಿರಲು
ನೆರಳು ನಾನಾಗುವೆ
ದಣಿದು ಬಳಿದುದಕೆ
ತಂಪು ನೀಡುವೆ

ನದಿ ನೀನಾಗಿರಲು
ಪ್ರವಾಹ ನಾನಾಗುವೆ
ಹಾದಿ ಕೊರೆಯುತಾ
ಗುರಿ ಸೇರುವೆ

ಮೋಡ ನೀನಾಗಲು
ಮಳೆ ನಾನಾಗುವೆ
ಧರೆಯ ಒಡಲಿಗೆ
ವೃಷ್ಟಿ ಹರಿಸುವೆ

ಕಿನ್ನರಿ ನೀನಾಗಲು
ನಾದ ನಾನಾಗುವೆ
ಭಾವ ಜೀವನ
ಗೀತೆ ಹಾಡುವೆ

ಸಮಯ ನೀನಾಗಿರಲು
ಕ್ಷಣ ನಾನಾಗುವೆ
ಕ್ಷಣ-ಕ್ಷಣ ಕಲೆತು
ಕಾಲಾನಂತ ತಲುಪುವೆ

ದೇಹ ನೀನಾಗಿರಲು
ಆತ್ಮ ನಾನಾಗುವೆ
ಆತ್ಮ ಬೆಳಗಿ
ಜ್ಞಾನ ನೀಡುವೆ

ಚೆಲುವು ನೀನಾಗಿರಲು
ಹರೆಯ ನಾನಾಗುವೆ
ಸೃಷ್ಟಿ ಸಂಪೂರ್ಣ
ಎರಡೂ ಮೇಳೈಸಿದಾಗಲೆ 

ಗುರುವಾರ, ಆಗಸ್ಟ್ 18, 2011

ನಾವಿಕ

ಕರೆಯದೆ ಬಂದೆಯ ಅಥಿತಿ ತಿಳಿದಿದು ಬೆರಗಿನ ಅರಮನೆ
ದೂರದ ಅರಮನೆ ಒಳ ಇಣುಕಲು ಅರಗಿನ ಸೆರೆಮನೆ
ತಿಮಿರ ತಿವಿದ ಗುಂಡಿಗೆ ಕಾಣದು ಜ್ಯೋತಿಯ ಜ್ವಾಲೆ
ಅಸದಳ ಚಿಂತೆ ದೌರ್ಬಲ್ಯಗಳ ತರಹೇವಾರು ಬೇನೆ

ಶಾಂತಿಯ ಅರಸೆ ದೂರಹೋಯಿತೆಲ್ಲಿ
ನೆಮ್ಮದಿಯ ಬಯಸೆ ಕಾಣದಾಗಿದೆ ಇಲ್ಲಿ
ತುಂಬು ಓ ಚೈತನ್ಯ ನನ್ನ ಆತ್ಮದಲ್ಲಿ
ಜ್ಞಾನ ದೀಪ ಉರಿಯಲಿ ಮನಸಿನರಿವಿನಲ್ಲಿ

ಬಲಹೀನತೆ ನನ್ನಿದಿರು ನಡುಬಗ್ಗಿ ನಡೆಯಲಿ
ಮಂಕುಮುಸುಕು ವಿಳಾಸಿಸದೆ ಬೆಂಗೊಟ್ಟೋಡಲಿ
ಮಾಲಿಕನೆ ಬರೆಯುವೆ ಸರ್ವಸ್ವ ನಿನ್ನ ಹೆಸರಲಿ 
ಇರಲು ಅಭಯ ಮಹಿಮನ ನಾಮ ಮಹಿಮೆಯಲಿ

ಬತ್ತಿದ ಅಕ್ಷಿಬಟ್ಟಲುಗಳಿವೆ ಕಣ್ಣೀರನು ತುಂಬುವೆಯಾ
ಮೃತಿ ಹೊಂದಿದೆ ಅಂತರಂಗ ಜೀವಬರಿಸುವೆಯಾ
ಕಣ್ಣಾಲಿಗಳು ತುಂಬಿಹರಿಯಲಿ ಉಕ್ಕಿಬರಲು ಹೃದಯ
ದಡ ಸೇರಿಸೋ ನಾವಿಕನೆ ಹತ್ತಿಹೆ ನಿನ್ನ ನಾವೆಯ 

ಸೋಮವಾರ, ಜುಲೈ 25, 2011

ನೀ ಬಂದೆ



ದಿಗಂತದಲಿ ಭುವಿಬಾನ ತಬ್ಬುವಂತೆ
ಕತ್ತಲೆ ನೀಗುವ ಬೆಳಕಿನ ಸ್ಪುರಣದಂತೆ
ನೆಲವ ನೆನೆವ ಬೆಳಗಿನ ಇಬ್ಬನಿಯಂತೆ
ಬರಡು ಹೃದಯಕೆ ಕುರುಡು ಜೀವಕೆ
ನೀ ಬಂದೆ, ಭಾವ ಲಹರಿಯಾಗಿ ನೀ ಬಂದೆ

ಗುರಿಪರಿಚಯ ಇಲ್ಲದ
ಸಾಧನೆ ಪರಿಶ್ರಮ ಇಲ್ಲದ
ಅಸಹನೀಯ ನಿರಾಶಾದಾಯಕ
ಜಡಜೀವಕೆ ಒಡನಾಡಿಯಾದ
ನೀ ಬಂದೆ, ಸಾಫಲ್ಯದ ಸೆಲೆಯಾಗಿ ನೀ ಬಂದೆ

ದುಃಖ-ದುಮ್ಮಾನ, ಅವಹೇಳನವ ಬದಿಗೊತ್ತಿ
ಚಿಂತೆ-ಆಲಸ್ಯ, ಕುಹಕ ಮಾತನು ಮೆಟ್ಟಿ
ಹೇಳುವೆನು ವಿಜಯಿ ಎಂದು ಎದೆತಟ್ಟಿ
ಇರುವಾಗ ಜೊತೆಯಾಗಿ, ನೀ ಬಲವಾಗಿ



ಮಂಗಳವಾರ, ಜುಲೈ 5, 2011

ವಸಂತ


ಹನಿ ಮಂಜಲಿ ತೊಯ್ದ ಸಸ್ಯಸಂಕುಲ
ಸಜ್ಜಾಯಿತು ಉಟ್ಟು ಹಸಿರುಡುಗೆ
ದನಿಯಾಯಿತು ಕೋಗಿಲೆ ಅರುಣೋದಯ ರಾಗಕೆ
ಸ್ವಾಗತ ಕೋರಿತು ವಸಂತಾಗಮನಕೆ

ಆಸರೆ ಅರಸಿ ಮರವನಪ್ಪಲು ಲತೆಯು
ಗೆಲುವ ಕಂಡಿತು ಒತ್ತಾಗಿ ಕಲೆತು
ಕಾವೇರಲು ತನುವು ಅರಳಿತು ಮನವು
ಮಿಡಿಯುವ ಆಸೆಗೆ ಬಯಸುತ ಒಲವು

ನಗು ಮೊಲ್ಲೆ ಮೊಗ್ಗು ಚೆಲ್ಲಲು ಸುಗಂಧವನು
ತಂಗಾಳಿ ಬೀಸಿ ಪಸರಿತು ಅನುರಾಗವನು
ಸನಿಹ ಬಳಸಿ ಭಾವ ತಿಳಿಸೆ ನಾಚಿ ನೀರಾಗಲು ನೀನು
ಆ ನೀರ್ಗೊಳದಲಿ ಮಿಂದ ಹಂಸ ನಾನು

ಅರಳಿದ ಹೂವ ಹರೆಯದ ಯವ್ವನ
ಮಧು ಪಕಳೆಯ ಚುಂಬಿಸಿ ಮತ್ತಾಯಿತು ಭ್ರಮರ
ನಾ ಕಳೆದು ಹೋದೆ ನಿನ್ನಳೊಂದಾಗಿ
ತುಂಬು ಒಲವಲಿ ಸವಿದೆ ಅಮೃತ ಅಮರ

ಹೊಳೆವ ಇರುಳಲಿ ನಲಿವ ಚೆಲುವ ನೈದಿಲೆ
ಮರೆತು ಬಿಟ್ಟಿತೆ ಬೆಳದಿಂಗಳ ಸಂಗವನು ?
ಪ್ರತಿವರುಷವು ಹರುಷದ ಹೊಸ ಹೊನಲು ಹರಿಸುತಿರಲು 
ವರುಷ ವರುಷವೂ ಕಾಯುತಿರುವೆ ನಿತ್ಯ ವಸಂತವನು.

The Morning Star of the Southwest, St. Philomena...

https://youtu.be/gg2qqrKwY7c?si=egtxAbeECGXwtONM